KRGRV
Friday, August 14, 2026
Homeಬೆಂಗಳೂರುಮಹಿಳೆಗೆ ಸಚಿವ ಸ್ಥಾನ ನೀಡದೆ ಅವಮಾನ: ಶಶಿಕಲಾ ಜೊಲ್ಲೆ

ಮಹಿಳೆಗೆ ಸಚಿವ ಸ್ಥಾನ ನೀಡದೆ ಅವಮಾನ: ಶಶಿಕಲಾ ಜೊಲ್ಲೆ

ಬೆಂಗಳೂರು: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡದೆ ಈ ಸರ್ಕಾರ ಮಹಿಳೆಯರಿಗೆ ಅವಮಾನ ಮಾಡಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಆರೋಪಿಸಿದರು.


ವಿಧಾನಸೌಧದ ಭುವನೇಶ್ವರಿ ಪ್ರತಿಮೆ ಬಳಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ವಿಪಕ್ಷ ನಾಯಕರಾದ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಶಶಿಕಲಾ ಜೊಲ್ಲೆ ಅವರು ಮಾತನಾಡಿದರು. ಸಂಪುಟ ರಚನೆಯಾಗಿ ಇಷ್ಟು ದಿನವಾದರೂ ಮಹಿಳೆಯರಿಗೆ ಅವಕಾಶ ನೀಡಿಲ್ಲ ಎಂದು ದೂರಿದರು.


ಈ ಸರ್ಕಾರಕ್ಕೆ ಮಹಿಳೆಯರ ಓಟು ಬೇಕು ಆದರೆ ಸಂಪುಟದಲ್ಲಿ ಸ್ಥಾನ ಬೇಡ. ಸರ್ಕಾರದ ಇಂತಹ ಧೋರಣೆಯನ್ನು ಖಂಡಿಸುತ್ತೇವೆ. ಕಾಂಗ್ರೆಸ್ ನ ಈ ಮಹಿಳಾ ವಿರೋಧಿ ಧೋರಣೆಗೆ ತಕ್ಕ ಉತ್ತರವನ್ನು ಮುಂದೆ ಕಲಿಸುತ್ತೇವೆ ಎಂದರು.

ಡಿ.ಕೆ.ಶಿವಕುಮಾರ್ ಅವರ ಸರ್ಕಾರದ ಸಚಿವರ ಪಟ್ಟಿಯಲ್ಲಿ ಮೊದಲು ಮಹಿಳೆಯೊಬ್ಬರ ಹೆಸರು ಇತ್ತು. ಆದರೆ ಅದನ್ನು ನಂತರ ತೆಗೆದು ಹಾಕಿದರು. ಇದರಿಂದ ರಾಜ್ಯದ ಎಲ್ಲ ಮಹಿಳೆಯರಿಗೆ ಅವಮಾನ ಆಗಿದೆ ಎಂದು ಟೀಕಿಸಿದರು.
ಸಂಸತ್ತಿನ ಮಹಿಳಾ ಮೀಸಲು ಮಸೂದೆಗೆ ಕಾಂಗ್ರೆಸ್ ವಿರೋಧ ಮಾಡಿತು. ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ನರೇಂದ್ರ ಮೋದಿ ಜೀ ಅವರ ಸರ್ಕಾರದ ಮಹತ್ವದ ಕ್ರಮಕ್ಕೆ ಕಾಂಗ್ರೆಸ್ ಬೆಂಬಲ ನೀಡಲಿಲ್ಲ. ಕಾಂಗ್ರೆಸ್ ಮಹಿಳೆಯರಿಗೆ ಯಾವ ರೀತಿಯ ಗೌರವ ನೀಡುತ್ತಾರೆ ಎಂಬುದು ಇದರಿಂದ ತಿಳಿಯುತ್ತದೆ ಎಂದರು. ಮಹಿಳೆಯರು ಇಂದು ಸುಶಿಕ್ಷಿತರಾಗಿದ್ಧಾರೆ, ಸಾಕಷ್ಟು ತಿಳಿವಳಿಕೆ ಪಡೆದುಕೊಂಡಿದ್ದಾರೆ. ಆದರೆ ಅವರಿಗೆ ಸರಿಯಾದ ಸ್ಥಾನ ಕೊಡಲು ಕಾಂಗ್ರೆಸ್ ಮುಂದಾಗಿಲ್ಲ ಎಂದರು.

ಹೆಚ್ಚಿನ ಸುದ್ದಿ