ಮತ್ತೆ ಮದರಸ ವಿದ್ಯಾರ್ಥಿಗಳ ಪುಂಡಾಟ
ಆರೋಪಿಗಳ ಬಂಧನಕ್ಕೆ ಮುಂದಾಗದ ಪೊಲೀಸರು
ಬೆಂಗಳೂರು: ಜಾಮೀಯಾ ಮೊಹಮ್ಮದಿಯಾ ಮನ್ಸೂರ ಮದರಸದ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಮತ್ತೊಮ್ಮೆ ಪುಂಡಾಟ ಮೆರೆದಿದ್ದು, ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದಂದು ಥಣಿಸಂದ್ರದಲ್ಲಿ ಮಸೀಹ ಅಹ್ಮದ್ ಎಂಬುವವರಿಗೆ ಸೇರಿದ ಜಾಗದಲ್ಲಿ ಗುಂಪು, ಗುಂಪಾಗಿ ಲಗ್ಗೆಇಟ್ಟು ಇಬ್ಬರು ಭದ್ರತಾ ಸಿಬ್ಬಂದಿಯನ್ನು ಕೂಡಿಹಾಕಿ, ಅವಾಚ್ಯವಾಗಿ ಬೈಯ್ದು, 2.5 ಲಕ್ಷ ರೂ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ಈ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಮದರಸ ವಿದ್ಯಾರ್ಥಿಗಳಿಂದ ಪದೇ ಪದೇ ದಾಳಿಗಳು ನಡೆಯುತ್ತಿದ್ದು, ಈ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಜುಲೈ 13 ರಂದು ಇದೇ ರೀತಿ ಸುಮಾರು 60 ಮಂದಿ ಪುಂಡರು ಮಾರಕಾಸ್ತ್ರಗಳ ಮೂಲಕ 15 ಮಂದಿ ಸಿಬ್ಬಂದಿ ವಿರುದ್ಧ ದಾಳಿ ನಡೆಸಿದ್ದರು. ಪೊಲೀಸರ ಮೇಲೂ ಹಲ್ಲೆ ಮಾಡಿದ್ದರು. ಆದರೆ ಈ ವರೆಗೆ ತಪ್ಪಿತಸ್ಥರನ್ನು ಪೊಲೀಸರು ಬಂಧಿಸಿಲ್ಲ. ತಮ್ಮ ಮೇಲೆ ದಾಳಿ ಮಾಡಿದರೂ ಪುಂಡರ ಅಟ್ಟಹಾಸ ಹತ್ತಿಕ್ಕಲು ಪೊಲೀಸರು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಜಮೀನಿನ ಮಾಲೀಕರಾದ ಮಸೀಹ ಅಹ್ಮದ್ ಆರೋಪಿಸಿದ್ದಾರೆ.
ಇದೀಗ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ನಡೆಸುವ ನೆಪದಲ್ಲಿ ಅತಿಕ್ರಮ ಪ್ರವೇಶ ಮಾಡಿ ಸಿಸಿಟಿವಿ ಕ್ಯಾಮರ ಧ್ವಂಸಗೊಳಿಸಿ ಈ ಕೃತ್ಯವೆಸಗಿದ್ದಾರೆ ಎಂದು ಸೆಕ್ಯೂರಿಟಿ ಗಾರ್ಡ್ ಸೇವೆ ಒದಗಿಸುವ ಪಿ.ಎನ್ ಗಾರ್ಡಿಯನ್ ಸೆಕ್ಯೂರಿಟಿ ಸರ್ವಿಸ್ ನ ನಿರ್ದೇಶಕ ಹನಮಂತರಾಯಪ್ಪ ಜಿ.ಕೆ [46] ದೂರು ಸಲ್ಲಿಸಿದ್ದಾರೆ.
ಮಸೀಹ ಅಹ್ಮದ್ ಅವರ ಥಣೀಸಂದ್ರದ ಸರ್ವೇ ನಂ.104/2, 104/3, 105/2, 105/3 ರ ಜಮೀನು ಕಾವಲು ಕಾಯುತ್ತಿದ್ದ ಭದ್ರತಾ ಸಿಬ್ಬಂದಿ ನಂದ ಕುಮಾರ್ ಮತ್ತು ನಿಂಗಪ್ಪ ಅವರನ್ನು ಜಾಮೀಯಾ ಮೊಹಮ್ಮದಿಯಾ ಮನ್ಸೂರಾ ಮದರಸಾದ ಖಾಲೀದ್ ಮುಷರಫ್, ಶಿಕ್ಷಕರು, ವಿದ್ಯಾರ್ಥಿಗಳು ಸೇರಿ ಅಕ್ರಮ ಬಂಧನದಲ್ಲಿಟ್ಟು ನಮಗೆ ಸೇರಿದ ಸೆಕ್ಯೂರಿಟಿ ಬಾಕ್ಸ್, ಸೆಕ್ಯೂರಿಟಿ ಮೊಬೈಲ್ ಹಾಗೂ ಅಮೂಲ್ಯ ದಾಖಲಾತಿಗಳನ್ನು ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸೆಕ್ಯೂರಿಟಿ ಕ್ಯಾಬಿನ್ ಇಟ್ಟು ಹಗಲು ರಾತ್ರಿ ಎರಡು ಪಾಳಿಯಲ್ಲಿ ತಲಾ ಇಬ್ಬರು ಸೆಕ್ಯೂರಿಟಿ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ. ಆ. 15 ರಂದು ಬೆಳಿಗ್ಗೆ 11.45 ಸಮಯದಲ್ಲಿ ಜಾಮೀಯಾ ಮೊಹಮ್ಮದಿಯಾ ಮನ್ಸೂರಾ ಮದರಸಾದ ಸಿ.ಇ.ಓ. ಖಾಲೀದ್ ಮುಷರಫ್ ಮತ್ತಿತರರು ಅತಿಕ್ರಮ ಪ್ರವೇಶಿಸಿ, ಇದು ನಮ್ಮ ಜಮೀನು, ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮೊಬೈಲ್ ಕಸಿದು ಬೈದು ಬೆದರಿಕೆ ಹಾಕಿದ್ದಾರೆ. ನಂತರ ಮಧ್ಯಾಹ್ನ 3 ಗಂಟೆಗೆ ಸಿಬ್ಬಂದಿಯನ್ನು ಕೊಠಡಿಯಿಂದ ಹೊರಗಡೆ ಕಳುಹಿಸಿದ್ದಾರೆ. ನಂತರ ಪರಿಶೀಲಿಸಿದಾಗ ಸೆಕ್ಯೂರಿಟಿ ಕ್ಯಾಬಿನ್, ಅಮೂಲ್ಯ ದಾಖಲೆಗಳನ್ನು ಹೊತ್ತೊಯ್ದಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನಮಗೆ ಸುರಕ್ಷತೆ ನೀಡಬೇಕು ಎಂದು ಕೋರಿದ್ದಾರೆ.

