KRGRV
Wednesday, November 19, 2025
Homeಜಿಲ್ಲಾ ಸುದ್ದಿಗಳುಗ್ರಾಮ ಪಂಚಾಯತ್ ವ್ಯಾಪ್ತಿಯ ಜಲಮೂಲಗಳ ಅತಿಕ್ರಮಣ ತ್ವರಿತ ತೆರವಿಗೆ ಸೂಚನೆ

ಗ್ರಾಮ ಪಂಚಾಯತ್ ವ್ಯಾಪ್ತಿಯ ಜಲಮೂಲಗಳ ಅತಿಕ್ರಮಣ ತ್ವರಿತ ತೆರವಿಗೆ ಸೂಚನೆ

ಬೆಂಗಳೂರು, ನವೆಂಬರ್‌ 04: ರಾಜ್ಯದ ಜಲಮೂಲಗಳ ಸಂರಕ್ಷಣೆಗಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಜಲಮೂಲಗಳ ಅತಿಕ್ರಮಣವನ್ನು ತೆರವುಗೊಳಿಸಲು ತ್ವರಿತವಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದಾರೆ.

ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ, ‘ನಮ್ಮ ಜಲಾಶಯಗಳ ಸಂರಕ್ಷಣೆಯಿಂದ ಪರಿಸರ ಸಮತೋಲನವನ್ನು ಕಾಪಾಡಬಹುದು’ ಎಂದು ಸಚಿವರು ಹೇಳಿದ್ದಾರೆ. ಅಲ್ಲದೇ ಕೃಷಿ ಚಟುವಟಿಕೆಗಳನ್ನು ಬೆಂಬಲಿಸುವುದು ಹಾಗೂ ನಮ್ಮ ಸಮುದಾಯಗಳಿಗೆ ಜಲ ಭದ್ರತೆಯನ್ನು ಖಚಿತಪಡಿಸುವುದು ಆದ್ಯತೆಯ ಕ್ರಮವಾಗಬೇಕು ಎಂದು ತಿಳಿಸಿದ್ದಾರೆ.

ಗ್ರಾಮ ಪಂಚಾಯತಿ ವ್ಯಾಪ್ತಿಯ ಅನೇಕ ಜಲಾಶಯಗಳಲ್ಲಿ ಅತಿಕ್ರಮಣಗಳಾಗಿರುವ ಬಗ್ಗೆ ಇಲಾಖೆಗೆ ಮಾಹಿತಿ ಬಂದಿದ್ದು, ಈ ಗಂಭೀರ ವಿಷಯವನ್ನು ಗಮನದಲ್ಲಿಟ್ಟುಕೊಂಡು, ತಕ್ಷಣವೇ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲು ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸಚಿವರು ನಿರ್ದೇಶನ ನೀಡಿದ್ದಾರೆ.

  1. ಜಲಮೂಲಗಳ ಅತಿಕ್ರಮಣವನ್ನು ಗುರುತಿಸುವುದು ಹಾಗೂ ವರದಿ ಸಲ್ಲಿಸುವುದು
    ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಜಲಮೂಲಗಳ ಸಮೀಕ್ಷೆಯನ್ನು ನಡೆಸಿ ಅತಿಕ್ರಮಣಗಳನ್ನು ಗುರುತಿಸುವುದು ಹಾಗೂ ವರದಿಯನ್ನು ಸಲ್ಲಿಸುವುದು. ಈ ವರದಿಯಲ್ಲಿ ಅತಿಕ್ರಮಣದ ವ್ಯಾಪ್ತಿ, ಭಾಗವಹಿಸಿದ ವ್ಯಕ್ತಿಗಳು ಮತ್ತು ಸ್ಥಳೀಯ ಪರಿಸರ ಮತ್ತು ಸಮುದಾಯದ ಮೇಲೆ ಪರಿಣಾಮ ಉಟು ಮಾಡಿರುವ ವಿವರಗಳನ್ನು ತಿಳಿಸುವುದು.
  2. ಅತಿಕ್ರಮಣವನ್ನು ತೆರವುಗೊಳಿಸಲು ಗಡುವು ನಿಗದಿಪಡಿಸುವುದು
    ಗುರುತಿಸಿದ ಅತಿಕ್ರಮಣಗಳ ತೆರವು ಕಾರ್ಯವನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಿ ಅನುಪಾಲನಾ ವರದಿಯನ್ನು ಪಡೆದುಕೊಳ್ಳುವುದು.
  3. ಕಾಲಕಾಲಕ್ಕೆ ಅತಿಕ್ರಮಣಗಳ ತೆರವು ಕಾರ್ಯದ ವರದಿ
    ಅತಿಕ್ರಮಣಗಳ ತೆರವು ಪ್ರಕ್ರಿಯೆಯ ಪ್ರಗತಿಯನ್ನು ತಿಂಗಳಿಗೊಮ್ಮೆ ಮೇಲ್ವಿಚಾರಣೆ ನಡೆಸಿ (Monitoring Progress) ತೆರವು ಕಾರ್ಯಚರಣೆ ಕೈಗೊಳ್ಳುವಲ್ಲಿ ಏನಾದರೂ ಸವಾಲುಗಳು ಇದ್ದಲ್ಲಿ, ಅವುಗಳನ್ನು ಸಕ್ಷಮ ಪ್ರಾಧಿಕಾರದ ಗಮನಕ್ಕೆ ತಂದು ಮುಂದಿನ ಕ್ರಮವಹಿಸುವ ಬಗ್ಗೆ ಸಚಿವರು ಸೂಚನೆ ನೀಡಿದ್ದಾರೆ.

ಹೆಚ್ಚಿನ ಸುದ್ದಿ