ಬೆಂಗಳೂರು:
ಡಿಜಿಟಲ್ ಕರ್ನಾಟಕವನ್ನು ಇನ್ನಷ್ಟು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಆಧಾರ್ ದೃಢೀಕರಣ ಸೇವೆಗಳಿಗೆ ಆಧಾರವಾಗಿರುವ ಹಾರ್ಡ್ವೇರ್ ಸೆಕ್ಯುರಿಟಿ ಮಾಡ್ಯೂಲ್ (HSM) ಅನ್ನು ಉನ್ನತೀಕರಿಸುತ್ತಿದೆ.
ಪ್ರತಿದಿನ ಸರಾಸರಿ 10 ರಿಂದ 12 ಲಕ್ಷ ಆಧಾರ್ ದೃಢೀಕರಣ ವಿನಂತಿಗಳನ್ನು ಈ ವ್ಯವಸ್ಥೆಯು ನಿರ್ವಹಿಸುತ್ತದೆ. ಈ ಪ್ರಮುಖ ವ್ಯವಸ್ಥೆಗೆ ಅತ್ಯಾಧುನಿಕ ಭದ್ರತಾ ತಂತ್ರಜ್ಞಾನಗಳನ್ನು ಅಳವಡಿಸುವುದರಿಂದ ಡಿಜಿಟಲ್ ಸೇವೆಗಳ ಭದ್ರತೆ, ವಿಶ್ವಾಸಾರ್ಹತೆ ಮತ್ತು ಒಟ್ಟಾರೆ ಕಾರ್ಯಕ್ಷಮತೆ ಇನ್ನಷ್ಟು ಬಲಗೊಳ್ಳಲಿದೆ ಎಂದು ಸರ್ಕಾರ ತಿಳಿಸಿದೆ.
ದಿನಾಂಕಗಳು:ಜುಲೈ 31, ಆಗಸ್ಟ್ 1 ಮತ್ತು ಆಗಸ್ಟ್ 2.
ಸಮಯ:ಪ್ರತಿದಿನ ಸಂಜೆ 6:00 ರಿಂದ ಬೆಳಗಿನ 6:00 ರವರೆಗೆ (ಕಚೇರಿ ಅವಧಿಯ ನಂತರ).
ಉದ್ದೇಶ: ಸಾರ್ವಜನಿಕರಿಗೆ ಯಾವುದೇ ರೀತಿಯ ಅನನುಕೂಲ ಅಥವಾ ಸೇವಾ ವ್ಯತ್ಯಯ ಉಂಟಾಗದಂತೆ ಎಚ್ಚರಿಕೆ ವಹಿಸಿ ಈ ತಾಂತ್ರಿಕ ಉನ್ನತೀಕರಣ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.
ಸರ್ಕಾರದ ಆದ್ಯತೆ:
ಸುರಕ್ಷಿತ, ವಿಶ್ವಾಸಾರ್ಹ ಮತ್ತು ಭವಿಷ್ಯಕ್ಕೆ ಪೂರಕವಾದ ಸದೃಢ ಡಿಜಿಟಲ್ ಆಡಳಿತ ವ್ಯವಸ್ಥೆಯನ್ನು ನಿರ್ಮಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ನಾಗರಿಕರ ಡಿಜಿಟಲ್ ಮಾಹಿತಿಯ ಭದ್ರತೆ ಹಾಗೂ ಸೈಬರ್ ಸಾಮರ್ಥ್ಯವನ್ನು ಬಲಪಡಿಸಲು ಮುಂಬರುವ ದಿನಗಳಲ್ಲೂ ಇಂತಹ ನಿರಂತರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

