ಮುದ್ದೇಬಿಹಾಳ:ಸ್ವಾತಂತ್ರ್ಯ ಪೂರ್ವದಿಂದಲೂ ನನೆಗುದಿಗೆ ಬಿದ್ದಿರುವ ಆಲಮಟ್ಟಿ – ಯಾದಗಿರಿ ರೈಲ್ವೆ ಯೋಜನೆಯನ್ನು ಕೂಡಲೇ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿ, ತಾಲೂಕಿನ ಔಷಧಿ ವ್ಯಾಪಾರಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಸಂಕಲ್ಪ ತೊಟ್ಟು ಹೋರಾಟಕ್ಕೆ ಇಳಿದಿದ್ದಾರೆ.
ಈ ಐತಿಹಾಸಿಕ ಹೋರಾಟದ ಕುರಿತು ಮಾಹಿತಿ ನೀಡಿದ ಸಂಘಟಕರಾದ ಶ್ರೀ ಅರವಿಂದ ಲದ್ದಿಮಠ ಅವರು, ತಮ್ಮ ಪೂರ್ವಜರಾದ ಸ್ವಾತಂತ್ರ್ಯ ಹೋರಾಟಗಾರ ರೇವಣಸಿದ್ದಯ್ಯ ಲದ್ದಿಮಠ ಹಾಗೂ ಪ್ರಥಮ ರೈಲು ಹೋರಾಟಗಾರ ಮುಲ್ಲಾ ಶಿಕ್ಷಕರ ಆದರ್ಶ ಮತ್ತು ಪ್ರೇರಣೆಯಿಂದ ತಾವು ಕಳೆದ ಹಲವು ದಶಕಗಳಿಂದ ಈ ರೈಲ್ವೆ ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ಅತ್ಯಂತ ಎಚ್ಚರಿಕೆಯಿಂದ ಸಂಗ್ರಹಿಸಿಟ್ಟುಕೊಂಡಿರುವುದಾಗಿ ತಿಳಿಸಿದರು.
ಈ ಯೋಜನೆ ಪ್ರಾರಂಭವಾಗಿ ಸುಮಾರು 93 ವರ್ಷಗಳೇ ಕಳೆದಿದ್ದರೂ, ಇನ್ನೂ ಪೂರ್ಣಗೊಳ್ಳದಿರುವುದು ದುರ್ದೈವದ ಸಂಗತಿಯಾಗಿದೆ. ಇನ್ನು ಕೇವಲ ಏಳು ವರ್ಷಗಳಲ್ಲಿ ಈ ಯೋಜನೆಗೆ ಒಂದು ಶತಮಾನ ತುಂಬಲಿದ್ದು, ಆದರೂ ಹೋರಾಟದ ಅನಿವಾರ್ಯತೆ ಇರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಚಳುವಳಿಗೆ ಬೆಂಬಲ ಸೂಚಿಸಿ ಮಾತನಾಡಿದ ಔಷಧಿ ವ್ಯಾಪಾರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಕೆ.ಆರ್. ಎತ್ತಿನಮನಿ ಹಾಗೂ ತಾಲೂಕಾಧ್ಯಕ್ಷರಾದ ಶ್ರೀ ಜಿ.ಎಂ. ಹಿರೇಮಠ್ ಅವರು, “ಈ ರೈಲ್ವೆ ಮಾರ್ಗವು ಈ ಭಾಗದ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಅತ್ಯಗತ್ಯವಾಗಿದೆ. ಸರ್ಕಾರ ತಕ್ಷಣವೇ ಈ ಯೋಜನೆಯನ್ನು ಕೈಗೆತ್ತಿಕೊಂಡು ಸಾರ್ವಜನಿಕರ ದಶಕಗಳ ಬೇಡಿಕೆಯನ್ನು ಈಡೇರಿಸಬೇಕು,” ಎಂದು ಆಗ್ರಹಿಸಿದರು
ಈ ಹೋರಾಟದಲ್ಲಿ ಮುದ್ದೇಬಿಹಾಳ ತಾಲೂಕಿನ ವ್ಯಾಪಾರಸ್ಥರ ಸಂಘದ ಪ್ರಮುಖರಾದ ಶ್ರೀ ಬಿ.ಎಸ್. ಮೇಟಿ, ಮುತ್ತಣ್ಣ ನಿಲುವಂಗಿಮಠ, ಕಿರಣ್ ಪಾಟೀಲ್ ಸೇರಿದಂತೆ ತಾಲೂಕು ಔಷಧಿ ವ್ಯಾಪಾರಿ ಸಂಘದ ಕಾರ್ಯದರ್ಶಿಗಳಾದ ಇಲಿಯಾಸ್ ಮಾಗಿ, ಎಚ್.ಎಸ್. ಪಾಟೀಲ್, ಶಿವ ಸಿದ್ದಾಪುರ, ಕುಮಾರಸ್ವಾಮಿ ಶಿವಯೋಗಿಮಠ, ರಾಜು ಅಂಗಡಿ, ಮಲ್ಲಿಕಾರ್ಜುನ ಓತಗೇರಿ, ಬನಶಂಕರಿ ಮೆಡಿಕಲ್ ಸ್ಟೋರ್ಸ್, ದಾನೇಶ್ವರಿ ಮೆಡಿಕಲ್ ಸ್ಟೋರ್ಸ್ ಹಾಗೂ ದೇಗಿನಾಳ ಔಷಧಿ ಅಂಗಡಿಯ ಮಾಲೀಕರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಸ್ಥಳೀಯ ಔಷಧಿ ವ್ಯಾಪಾರಿಗಳ ಈ ಹೋರಾಟಕ್ಕೆ ವಿವಿಧ ಸಂಘಟನೆಗಳು ಹಾಗೂ ಪತ್ರಿಕಾ ಮಾಧ್ಯಮದವರು ಸಹ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

