ಬೆಂಗಳೂರು, ಸೆ.16: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಆಧುನಿಕ, ಗುಣಮಟ್ಟದ ಹಾಗೂ ತಂತ್ರಜ್ಞಾನ ಸ್ನೇಹಿಯಾಗಿ ರೂಪಿಸುವ ಉದ್ದೇಶದಿಂದ ರಾಷ್ಟ್ರೀಯ ಮಟ್ಟದ ‘ದಿ ಸ್ಕೂಲ್ಸ್ ಆಫ್ ಇಂಡಿಯಾ ಎಜುಕೇಶನ್ ಸಮಿಟ್–2026’ ಅನ್ನು ಮಹಾರಾಷ್ಟ್ರದ ಖೋಪೋಲಿಯ ನೊವೋಟೆಲ್ ಇಮ್ಯಾಜಿಕಾದಲ್ಲಿ ಅಕ್ಟೋಬರ್ 30ರಿಂದ ನವೆಂಬರ್ 1ರವರೆಗೆ ಮೂರು ದಿನಗಳ ಕಾಲ ಆಯೋಜಿಸಲಾಗಿದೆ.
ಈ ಸಮಿಟ್ನಲ್ಲಿ ದೇಶದ ವಿವಿಧ ರಾಜ್ಯಗಳಿಂದ ಶಿಕ್ಷಣ ತಜ್ಞರು, ಶಾಲಾ ಸಂಸ್ಥಾಪಕರು, ಪ್ರಾಂಶುಪಾಲರು, ಶಿಕ್ಷಣ ನೀತಿ ರೂಪಿಸುವವರು, ಸಂಶೋಧಕರು, ಎಡ್ಟೆಕ್ ಉದ್ಯಮಿಗಳು ಹಾಗೂ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದ ಪರಿಣತರು ಒಂದೇ ವೇದಿಕೆಯಲ್ಲಿ ಸೇರಿ ಶಾಲಾ ಶಿಕ್ಷಣದ ಭವಿಷ್ಯದ ಕುರಿತು ಸಮಗ್ರ ಚರ್ಚೆ ನಡೆಸಲಿದ್ದಾರೆ.
ಧ್ರುವ್ ಗ್ಲೋಬಲ್ ಸ್ಕೂಲ್ಸ್ ನಿರ್ದೇಶಕಿ ಅನಿಶ್ಕಾ ಮಲ್ಪಾನಿ ಮಾತನಾಡಿ, ಇಂದಿನ ವೇಗವಾಗಿ ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಮತ್ತು ಸಾಂಪ್ರದಾಯಿಕ ಮೌಲ್ಯಗಳ ಸಮತೋಲನ ಅತ್ಯಗತ್ಯವಾಗಿದೆ. ಈ ಸಮಿಟ್ ಕೇವಲ ವಿಚಾರ ವಿನಿಮಯಕ್ಕೆ ಸೀಮಿತವಾಗದೇ, ಶಿಕ್ಷಣ ಸಂಸ್ಥೆಗಳು ಅನುಷ್ಠಾನಗೊಳಿಸಬಹುದಾದ ಪರಿಣಾಮಕಾರಿ ಕಾರ್ಯತಂತ್ರಗಳನ್ನು ರೂಪಿಸುವ ವೇದಿಕೆಯಾಗಲಿದೆ ಎಂದು ತಿಳಿಸಿದರು.
ಮಲ್ಪಾನಿ ಗ್ರೂಪ್ ನಿರ್ದೇಶಕ ಯಶವರ್ಧನ್ ಮಲ್ಪಾನಿ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗುತ್ತಿರುವ ಈ ಸಮಾರಂಭದಲ್ಲಿ, ತರಗತಿಗಳಲ್ಲಿ ಕೃತಕ ಬುದ್ಧಿಮತ್ತೆಯ ಸಮರ್ಪಕ ಬಳಕೆ, ಗುಣಮಟ್ಟದ ಶಿಕ್ಷಣವನ್ನು ಎಲ್ಲ ಮಕ್ಕಳಿಗೂ ತಲುಪಿಸುವ ಮಾರ್ಗಗಳು, ಬದಲಾಗುತ್ತಿರುವ ಬೋಧನಾ ವಿಧಾನಗಳು, ಶಾಲಾ ನಾಯಕತ್ವ, ಸಂಸ್ಥೆಯ ಸಮರ್ಥ ನಿರ್ವಹಣೆ, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಹಾಗೂ ಸಮಗ್ರ ವ್ಯಕ್ತಿತ್ವ ವಿಕಸನದಂತಹ ಮಹತ್ವದ ವಿಷಯಗಳ ಕುರಿತು ವಿಶೇಷ ಅಧಿವೇಶನಗಳು ನಡೆಯಲಿವೆ.
ದಿ ಸ್ಕೂಲ್ಸ್ ಆಫ್ ಇಂಡಿಯಾ ಸಂಸ್ಥಾಪಕ ಅಂಕಿತ್ ಪುಷ್ಪರಾಜ್ ವರ್ಮಾ ಮಾತನಾಡಿ, ಶಿಕ್ಷಣ ಕ್ಷೇತ್ರದ ಸವಾಲುಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಕಂಡುಹಿಡಿಯುವ ಉದ್ದೇಶದಿಂದ ಈ ಸಮಿಟ್ ರೂಪಿಸಲಾಗಿದೆ. ಶಾಲಾ ಆಡಳಿತದಿಂದ ಹಿಡಿದು ತರಗತಿ ಕೊಠಡಿವರೆಗೆ ಅನುಷ್ಠಾನಗೊಳಿಸಬಹುದಾದ ನವೀನ ಮಾದರಿಗಳ ಕುರಿತು ತಜ್ಞರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಎಂದರು.
ಸಮಿಟ್ನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಸುರಕ್ಷಿತ ಹಾಗೂ ಜವಾಬ್ದಾರಿಯುತ ಬಳಕೆಗೆ ಸಂಬಂಧಿಸಿದ ಕಾರ್ಯಾಗಾರಗಳು, ಜಾಗತಿಕ ಶಿಕ್ಷಣ ವ್ಯವಸ್ಥೆಯಲ್ಲಿನ ಹೊಸ ಬೆಳವಣಿಗೆಗಳ ವಿಶ್ಲೇಷಣೆ, ಅಂತರರಾಷ್ಟ್ರೀಯ ಪಠ್ಯಕ್ರಮಗಳ ಪರಿಚಯ ಹಾಗೂ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಅವುಗಳ ಹೊಂದಾಣಿಕೆ ಕುರಿತು ವಿಶೇಷ ಚರ್ಚೆಗಳು ನಡೆಯಲಿವೆ.
ಇದರೊಂದಿಗೆ ಶಿಕ್ಷಣ ತಂತ್ರಜ್ಞಾನ ಪ್ರದರ್ಶನವನ್ನೂ ಏರ್ಪಡಿಸಲಾಗಿದ್ದು, ಅತ್ಯಾಧುನಿಕ ಎಡ್ಟೆಕ್ ಪರಿಹಾರಗಳು, ಸ್ಮಾರ್ಟ್ ಕ್ಲಾಸ್ರೂಮ್ ತಂತ್ರಜ್ಞಾನ, ಡಿಜಿಟಲ್ ಕಲಿಕಾ ಸಾಧನಗಳು ಮತ್ತು ನವೀನ ಶೈಕ್ಷಣಿಕ ಸಂಪನ್ಮೂಲಗಳನ್ನು ಪ್ರದರ್ಶಿಸಲಾಗುತ್ತದೆ.
ಸಮಿಟ್ನಲ್ಲಿ ಲಕ್ಷ್ಮೀ ಕುಮಾರ್, ಸಂಜಯ್ ಮಲ್ಪಾನಿ, ಡಾ. ಸ್ವಾತಿ ಪೊಪಟ್ ವಾಟ್ಸ್, ರಸೆಲ್ ಜಾನ್ ಕೆಲ್ಲಿ, ಸೀತಾ ಮೂರ್ತಿ, ಅಲ್ಕಾ ಪಾಂಡೆ, ಪರಿಮಳ್ ಮರ್ಚೆಂಟ್ ಹಾಗೂ ಮೃಣಾಲ್ ಶಾ ಸೇರಿದಂತೆ ಹಲವು ಖ್ಯಾತ ಶಿಕ್ಷಣ ತಜ್ಞರು ಮತ್ತು ಉದ್ಯಮ ಪರಿಣತರು ಭಾಷಣ ಮಾಡಲಿದ್ದು, ಮೂರು ದಿನಗಳ ಅವಧಿಯಲ್ಲಿ ವಿವಿಧ ವಿಶೇಷ ಘೋಷಣೆಗಳು ಮತ್ತು ಪತ್ರಿಕಾಗೋಷ್ಠಿಗಳನ್ನೂ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ.
ದೇಶದ ಶಿಕ್ಷಣ ಕ್ಷೇತ್ರದ ಎಲ್ಲ ಪ್ರಮುಖ ಪಾಲುದಾರರನ್ನು ಒಂದೇ ವೇದಿಕೆಗೆ ತಂದು ಜ್ಞಾನ, ಅನುಭವ ಹಾಗೂ ನವೀನ ಆಲೋಚನೆಗಳನ್ನು ಹಂಚಿಕೊಳ್ಳುವ ಈ ಸಮಿಟ್, ಭಾರತದ ಶಾಲಾ ಶಿಕ್ಷಣಕ್ಕೆ ಹೊಸ ದಿಕ್ಕು ನೀಡುವ ಮಹತ್ವದ ವೇದಿಕೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.

