KRGRV
Tuesday, November 18, 2025
Homeಆಧ್ಯಾತ್ಮಪಂದ್ಯದಲ್ಲಿ ಗೆದ್ದು ಪ್ರಥಮ ಪೂಜ್ಯತೆ ಪಡೆದ ಗಣೇಶ

ಪಂದ್ಯದಲ್ಲಿ ಗೆದ್ದು ಪ್ರಥಮ ಪೂಜ್ಯತೆ ಪಡೆದ ಗಣೇಶ

ದಿನಕ್ಕೊಂದು ಕಥೆ

ಒಂದು ದಿನ ಕೈಲಾಸ ವಾಸನಾದ ಶಿವ ಮತ್ತು ಮಡದಿ ಪಾರ್ವತಿ ತಮ್ಮಿಬ್ಬರ ಪುತ್ರರಾದ ಗಣೇಶ ಮತ್ತು ಸುಬ್ರಹ್ಮಮಣ್ಯರೊಂದಿಗೆ ಸಂತಸದಿಂದ ಕಾಲಕಳೆಯುತ್ತಿದ್ದರು. ತಮ್ಮ ಇಬ್ಬರ ಮಕ್ಕಳಿಗಾಗಿ ಒಂದು ಸ್ಪರ್ಧೆ ಇಟ್ಟು, ಒಂದು ಹಣ್ಣು ತೋರಿಸಿದರು.

ಇಬ್ಬರಿಗೂ ತಮಗೇ ಆ ಹಣ್ಣು ಸೇರಬೇಕೆಂಬ ಆಸೆಯಿತ್ತು. ಏಕೆಂದರೆ ಆ ಹಣ್ಣು ವಿಶೇಷವಾದ ಜ್ಞಾನ ಮತ್ತು ಎಂದಿಗೂ ಅಳಿಯದ ವಿಶೇಷತೆಯನ್ನು ಹೊಂದಿತ್ತು. ಈ ಹಣ್ಣು ಪಡೆಯಲು ಪ್ರಪಂಚವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿ, ಯಾರು ಮೊದಲು ಬರುವರೋ ಅವರಿಗೆ ಆ ಹಣ್ಣು ಕೊಡಲಾಗುವುದು ಎಂದರು.

ಅಷ್ಟು ಹೇಳಿದ್ದೇ ತಡಮಾಡದೆ, ಕಾರ್ತಿಕೇಯ ಆತನ ವಾಹನವಾದ ನವಿಲನ್ನೇರಿ ಹೊರಟ. ಆಕಾಶದಲ್ಲಿ ಹಾರಾಡುತ್ತಾ ಪವಿತ್ರವೂ ಪಾವನ ಪೂಜ್ಯವೂ ಆದ ಸ್ಥಳಗಳನ್ನು ನೋಡುತ್ತ, ತೀರ್ಥಗಳಲ್ಲಿ ಮಿಂದು, ದೇವದೇವೋತ್ತಮರನ್ನೆಲ್ಲಾ ಪೂಜಿಸುತ್ತಾ ಮುಂದೆ ಸಾಗಿದ.

ಆದರೆ ಗಣೇಶನಿಗೆ ತನ್ನ ದೇಹದ್ದೇ ಚಿಂತೆ. ತನ್ನ ಡೊಳ್ಳು ಹೊಟ್ಟೆಯನ್ನೆತ್ತಿಕೊಂಡು ನಿಧಾನವಾಗಿ ಸಾಗಿದರೆ ಯಾವುದೇ ರೀತಿಯಲ್ಲೂ ತಾನು ಕಾರ್ತಿಕೇಯನನ್ನು ಸೋಲಿಸಲಾರ ಎಂಬುದು ಅವನಿಗೆ ಚೆನ್ನಾಗಿ ತಿಳಿದಿತ್ತು. ಆದರೆ ಅವನ ಬುದ್ಧಿಯು ಅವನ ಸಮಸ್ಯೆಗೆ ತಕ್ಕ ಪರಿಹಾರ ಸೂಚಿಸಿತ್ತು. ಅವನು ಮರುಯೋಚಿಸದೇ ತನ್ನ ಜನುಮದಾತರಾದ ಸಾಕ್ಷಾತ್ ಪಾರ್ವತೀ ಪರಮೇಶ್ವರರಿಗೆ ಮೂರು ಬಾರಿ ಪ್ರದಕ್ಷಿಣೆ ಹಾಕಿ ನಿಂತನು.

ನನ್ನ ಮಾತಾ-ಪಿತರಾದ ಶಿವ ಪಾರ್ವತಿಯರಲ್ಲಿ ಇಡೀ ಜಗತ್ತೇ ಮೈದುಂಬಿರಲು, ಅವರೇ ಸರ್ವಸ್ವವಾಗಿರುವಾಗ ನಾನು ಬೇರೆಲ್ಲೂ ಹೋಗಬೇಕಾದ ಅವಶ್ಯಕತೆಯಿಲ್ಲ ಎಂದು ಗಣೇಶ ತನ್ನ ನಿಲುವನ್ನು ಸಮರ್ಥಿಸಿಕೊಂಡ.

ಹೀಗೆ ಕಾರ್ತಿಕೇಯ ಮತ್ತು ಗಣೇಶ ಇಬ್ಬರಲ್ಲಿ ಗಣೇಶ ತನ್ನ ಬುದ್ಧಿವಂತಿಕೆಯಿಂದ ಪಂದ್ಯ ಗೆದ್ದು ಆ ಹಣ್ಣು ಪಡೆದು, ಪ್ರಥಮ ಪೂಜ್ಯತೆ ಪಡೆದ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

ಹೆಚ್ಚಿನ ಸುದ್ದಿ