KRGRV
Tuesday, February 3, 2026
Homeಆಧ್ಯಾತ್ಮಇಸ್ರೋ ಕೇಂದ್ರಕ್ಕೆ ಸಿಎಂ ಭೇಟಿ; ವಿಜ್ಞಾನಿಗಳಿಗೆ ಸಿಹಿಹಂಚಿ ಅಭಿನಂದನೆ!

ಇಸ್ರೋ ಕೇಂದ್ರಕ್ಕೆ ಸಿಎಂ ಭೇಟಿ; ವಿಜ್ಞಾನಿಗಳಿಗೆ ಸಿಹಿಹಂಚಿ ಅಭಿನಂದನೆ!

ಬೆಂಗಳೂರು: ಚಂದ್ರನ ಮೇಲೆ ಇಳಿದು ಇತಿಹಾಸ ಬರೆದಿರುವ ಇಸ್ರೋ ವಿಜ್ಞಾನಿಗಳ ಕಾರ್ಯಕ್ಕೆ ಎಲ್ಲೆಡೆ ಭಾರೀ ಪ್ರಶಂಸೆ ಕೇಳಿಬರುತ್ತಿದೆ. ಈ ನಡುವೆ ಇಸ್ರೋ ವಿಜ್ಞಾನಿಗಳನ್ನು ಸಿಎಂ ಸಿದ್ದರಾಮಯ್ಯ ಇಂದು ಭೇಟಿಯಾಗಿದ್ದಾರೆ. ಬೆಂಗಳೂರು ಕಚೇರಿಗೆ ಆಗಮಿಸಿದ ಸಿಎಂ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿ ಸನ್ಮಾನಿಸಿದರು.

ನಗರದ ಪೀಣ್ಯ ಬಳಿ ಇರುವ ಇಸ್ರೋ ಕಮಾಂಡಿಂಗ್ ಸೆಂಟರ್‌ಗೆ ಭೇಟಿ ನೀಡಿ ಚಂದ್ರಯಾನ-3ರ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರನ್ನು ಅಭಿನಂದಿಸಿದ್ದಾರೆ. ಜೊತೆಗೆ ಚಂದ್ರಯಾನ್ ಯೋಜನೆಗೆ ಪ್ರಮುಖ ಪಾತ್ರ ವಹಿಸಿದ್ದ ಎಲ್ಲಾ ಸಿಬ್ಬಂದಿಗೂ ಸಿಹಿ ವಿತರಿಸಿ, ಅವರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿ ಸಂತಸ ಹಂಚಿಕೊಂಡರು.

ಬಳಿಕ ಮಾತನಾಡಿದ ಸಿದ್ದರಾಮಯ್ಯ, ‘ಇಸ್ರೋ ಅಧ್ಯಕ್ಷರಿಗೆ ಹಾಗೂ ವಿಜ್ಞಾನಿಗಳಿಗೆ ಸರ್ಕಾರದ ವತಿಯಿಂದ ಗೌರವಿಸಲಾಗುತ್ತದೆ. ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಗೌರವ ಸಲ್ಲಿಸಲಾಗುತ್ತದೆ. ಇದು ನಮಗೆಲ್ಲ ಹೆಮ್ಮೆ ತರುವಂತಹ ವಿಚಾರ. ನಾನು ಕೂಡ ನಿನ್ನೆ ವಿಕ್ರಂ ರೋವರ್ ಲ್ಯಾಂಡಿಂಗ್ ವೀಕ್ಷಣೆ ಮಾಡಿದ್ದೇನೆ. ಇದೊಂದು ದೊಡ್ಡ ಸಾಧನೆ, ಹಲವು ವರ್ಷಗಳಿಂದ ವಿಜ್ಞಾನಿಗಳು ಶ್ರಮ ಪಡ್ತಿದ್ದಾರೆ. ಅಂದಾಜು 500 ವಿಜ್ಞಾನಿಗಳ ಪರಿಶ್ರಮದ ಫಲ ಇದು’ ಎಂದಿದ್ದಾರೆ.

ನಿನ್ನೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಸಂಸ್ಥೆಯ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು.

ಹೆಚ್ಚಿನ ಸುದ್ದಿ