ಸಿಂದಗಿ: ಕನಸು ಕಾಣುವುದು ಸುಲಭ, ಆದರೆ ಆ ಕನಸನ್ನು ನನಸಾಗಿಸಲು ಕಠಿಣ ಪರಿಶ್ರಮ, ಛಲ ಮತ್ತು ನಿರಂತರ ಪ್ರಯತ್ನ ಅಗತ್ಯ. ಅಂತಹ ಸಾಧನೆಗೆ ಸಾಕ್ಷಿಯಾಗಿದ್ದಾರೆ ಸಿಂದಗಿ ತಾಲ್ಲೂಕಿನ ಗೋರವಗುಂಡಗಿ ಗ್ರಾಮದ ಹಡ್ರಗಲ್ ಕುಟುಂಬದ ಸಹೋದರರಾದ ಪರಶುರಾಮ ಮತ್ತು ಶರಣು.
ಬಾಲ್ಯದಲ್ಲಿಯೇ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕು ಎಂಬ ಕನಸು ಕಂಡಿದ್ದ ಈ ಸಹೋದರರು, ಬಡತನದ ನಡುವೆಯೂ ತಮ್ಮ ಗುರಿಯನ್ನು ಬಿಡದೆ ಕಠಿಣ ಪರಿಶ್ರಮದಿಂದ ಸಾಧನೆಯ ಹಾದಿ ತುಳಿದಿದ್ದಾರೆ.
ಹಿರಿಯ ಸಹೋದರ ಪರಶುರಾಮ ಅವರು 2016ರಲ್ಲಿ ಪೊಲೀಸ್ ಇಲಾಖೆಗೆ ಆಯ್ಕೆಯಾಗುವ ಮೂಲಕ ತಮ್ಮ ಬಾಲ್ಯದ ಕನಸನ್ನು ನನಸಾಗಿಸಿಕೊಂಡರು. ಅವರ ಹೆಜ್ಜೆ ಗುರುತುಗಳನ್ನು ಅನುಸರಿಸಿದ ಕಿರಿಯ ಸಹೋದರ ಶರಣು ಅವರು 2018ರಲ್ಲಿ ಸಿವಿಲ್ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿ, ಪೊಲೀಸ್ ಇಲಾಖೆಯಲ್ಲಿ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದಾರೆ.
ಒಂದೇ ಕುಟುಂಬದ ಇಬ್ಬರು ಸಹೋದರರು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಗೋರವಗುಂಡಗಿ ಗ್ರಾಮ ಮಾತ್ರವಲ್ಲದೆ ಸಿಂದಗಿ ತಾಲ್ಲೂಕಿನ ಜನರಿಗೂ ಹೆಮ್ಮೆಯ ಸಂಗತಿಯಾಗಿದೆ. ಬಡತನದ ಸವಾಲುಗಳ ನಡುವೆಯೂ ಶಿಕ್ಷಣ ಹಾಗೂ ಪರಿಶ್ರಮದ ಮೂಲಕ ಗುರಿ ಸಾಧಿಸಬಹುದು ಎಂಬುದಕ್ಕೆ ಇವರಿಬ್ಬರ ಜೀವನವೇ ಪ್ರೇರಣೆಯಾಗಿದೆ.
“ಕನಸು ಕಂಡರೆ ಸಾಲದು, ಆ ಕನಸಿಗಾಗಿ ಕಷ್ಟಪಟ್ಟು ದುಡಿದಾಗ ಮಾತ್ರ ಅದು ನನಸಾಗುತ್ತದೆ” ಎಂಬುದನ್ನು ಈ ಸಹೋದರರು ತಮ್ಮ ಸಾಧನೆಯ ಮೂಲಕ ತೋರಿಸಿಕೊಟ್ಟಿದ್ದಾರೆ.
ಪರಶುರಾಮ ಹಾಗೂ ಶರಣು ಅವರ ಸಾಧನೆಗೆ ನೇರ ನುಡಿ ಸುದ್ದಿ ವಾಹಿನಿ ತಂಡದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳು.

