ಬೆಂಗಳೂರು, ಆ.21: ಇಂದು ರಾಜ್ಯಾದ್ಯಂತ ನಾಗರ ಪಂಚಮಿ (Naga Panchami) ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ನಾಗರ ಪಂಚಮಿ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ನಾಗಾರ ಪಂಚಮಿ ಸಾಲು-ಸಾಲು ಹಬ್ಬಗಳನ್ನು ಹೊತ್ತು ತರುತ್ತೆ. ಈ ಹಬ್ಬದ ಬಳಿಕ ವರಮಹಾಲಕ್ಷ್ಮಿ ಹಬ್ಬ(Varamahalakshmi Festival), ರಕ್ಷಾ ಬಂಧನ(Raksha Bandhan), ಕೃಷ್ಣ ಜನ್ಮಾಷ್ಟಮಿ(Krishna Janmashtami), ಗಣೇಶ ಚತುರ್ಥಿ(Ganesha Chaturthi), ದಸರಾ(Dasara), ದೀಪಾವಳಿ(Deepavali) ಹೀಗೆ ಹಲವು ಹಬ್ಬಗಳು ಬರುತ್ತವೆ.

ಹಿಂದೂ ಧರ್ಮಗ್ರಂಥಗಳಲ್ಲಿ ಹಾವನ್ನು ದೇವತೆ ಎಂದು ಪರಿಗಣಿಸಲಾಗುತ್ತದೆ. ಇಂದು ಅನೇಕ ಕಾರಣಗಳಿಂದಾಗಿ ನಾಗರದೇವತೆಯನ್ನು ಪೂಜಿಸಲಾಗುತ್ತೆ. ಈ ದಿನ ಹಾವಿಗೆ ಹಾಲೆರೆದು ಪೂಜಿಸಿ ಸಕಲ ಇಷ್ಟಾರ್ಥಗಳು ಪ್ರಾಪ್ತಿಯಾಗುವಂತೆ ನಾಗದೇವನನ್ನ ಬೇಡುವುದು ವಾಡಿಕೆ. ಶೇಷನಾಗ ಹಾಗೂ ಶ್ರೀ ವಿಷ್ಣುವನ್ನ ಭಕ್ತಿಯಿಂದ ಪೂಜಿಸಲಾಗುತ್ತದೆ. ಹೀಗಾಗಿ ಇಂದು ನಗರದ ಹಲವು ದೇವಸ್ಥಾನಗಳಲ್ಲಿ ನಾಗಾಕಲ್ಲಿಗೆ ಪೂಜೆ ಸಲ್ಲಿಸಲಾಗುತ್ತಿದೆ.
ಸಿಲಿಕಾನ್ ಸಿಟಿಯಲ್ಲಿ ಮಹಿಳೆಯ ಪಂಚಮಿ ಸಂಭ್ರಮ

ಬೆಂಗಳೂರಿನಲ್ಲಿ ನಾಗರ ಪಂಚಮಿ ಸಂಭ್ರಮ ಮನೆ ಮಾಡಿದೆ. ಮಹಿಳೆಯರು ಚಂದದ ಸೀರೆಯನುಟ್ಟು ದೇವಸ್ಥಾನಕ್ಕೆ ಭೆಟಿ ಕೊಟ್ಟು ಕಲ್ಲಿನಾಗಕ್ಕೆ ಹಾಲೆರೆಯುತ್ತಿದ್ದಾರೆ. ಮನೆಯನ್ನು ಸಿಂಗರಿಸಿ ಸಿಹಿ ಖಾದ್ಯಗಳ ಘಮ ಪಸರಿಸಿದೆ. ಹಾವಿನ ಹೊತ್ತಕ್ಕೆ ಹಾಲೆರೆದು ಸಕಲ ಇಷ್ಟಾರ್ಥಗಳು ಪ್ರಾಪ್ತಿಯಾಗುವಂತೆ ನಾಗಪ್ಪನನ್ನು ಬೇಡುತ್ತಿದ್ದಾರೆ.
ಈಶಾ ಫೌಡೇಷನ್ನತ್ತ ಹರಿದು ಬರ್ತಿರುವ ಭಕ್ತರು
ಇಂದು ನಾಗರಪಂಚಮಿ ಹಾಗೂ ನಾಗಮಂಡಲ ಕಾರ್ಯಕ್ರಮ ಹಿನ್ನೆಲೆ ಮುಂಜಾನೆಯಿಂದಲೇ ಈಶಾ ಫೌಡೇಷನ್ನತ್ತ ಭಕ್ತರು ಹರಿದು ಬರ್ತಿದ್ದಾರೆ. ನಾಗಮಂಟಪ ದರ್ಶನ ಹಾಗೂ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಬಳಿಯಿರುವ ಈಶಾ ಫೌಡೇಷನ್ನಲ್ಲಿ ಇಂದು ಸಂಜೆ ಜಗ್ಗಿ ವಾಸುದೇವ್ ನೇತೃತ್ವದಲ್ಲಿ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಮುಂದೆ ಪೂಜೆ ಪುನಸ್ಕಾರ ನಡೆಯಲಿದೆ. ನಾಗರ ಪಂಚಮಿ ಹಬ್ಬ ಆಚರಿಸಲಾಗುತ್ತೆ.

ಕೋಟೆನಾಡಿನಲ್ಲಿ ನಾಗರ ಪಂಚಮಿ ಹಬ್ಬದ ಸಂಭ್ರಮ, ಸಡಗರ
ಚಿತ್ರದುರ್ಗ ನಗರದ ವಿವಿಧ ನಾಗರಕಟ್ಟೆಗಳಲ್ಲಿ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿ ನಾಗರ ವಿಗ್ರಹಗಳಿಗೆ ಹಾಲೆರೆದು ನಾಗರ ಪಂಚಮಿ ಆಚರಣೆ ಮಾಡುತ್ತಿದ್ದಾರೆ. ನಾಗದೇವನಿಗೆ ಭಕ್ತಿಯ ಪೂಜೆ ಸಲ್ಲಿಸಿ ದುರ್ಗದ ಜನ ಹಬ್ಬ ಆಚರಿಸುತ್ತಿದ್ದಾರೆ.
ಪುರಾಣಗಳ ಪ್ರಕಾರ, ನಾಗ ಪಂಚಮಿಯಂದು ಮಾಡುವ ಪೂಜೆಯು ರಾಹು, ಕೇತು ಮತ್ತು ಕಾಳ ಸರ್ಪದೋಷದ ಕೆಟ್ಟ ಪರಿಣಾಮಗಳಿಂದ ಮುಕ್ತಿಯನ್ನು ನೀಡುತ್ತದೆ. ಶಿವನು ಯಾವಾಗಲೂ ತನ್ನ ಕೊರಳಲ್ಲಿ ವಾಸುಕಿ ನಾಗನನ್ನು ಇಟ್ಟುಕೊಂಡಿರುತ್ತಾನೆ ಎನ್ನುವ ನಂಬಿಕೆಯಿದೆ. ಆದ್ದರಿಂದ ಹಾವನ್ನು ಪೂಜಿಸುವುದು ಶಿವನನ್ನು ಮೆಚ್ಚಿಸುತ್ತದೆ.

